Translate in your Language

Wednesday, February 14, 2024

ಬೆಟಗೇರಿ ಕೃಷ್ಣಶರ್ಮ (ಆನಂದ ಕಂದ)

 

ಆನಂದ ಕಂದ

ಬೆಟಗೇರಿ ಕೃಷ್ಣಶರ್ಮರು 5ನೆಯ ತರಗತಿವರೆಗೆ ಬೆಟಗೇರಿಯಲ್ಲೇ ಕಲಿತು ಮುಂದೆ ತಂದೆಯ ಅಕಾಲಿಕ ಮೃತ್ಯುವಿನಿಂದ ಕಂಪಿಸುವ ಕಾಲುಗಳಿಂದ ಮಮದಾಪುರಕ್ಕೆ ಹೋಗಿ ಶಿಕ್ಷಣವನ್ನು ಮುಂದುವರಿಸಿ 1917ರಲ್ಲಿ ಬೆಳಗಾವಿಗೆ ಹೋಗಿ ಮುಲ್ಕಿ (7ನೇ ತರಗತಿ) ಪರೀಕ್ಷೆ ಬರೆದದ್ದೇ ಅವರ ಕೊನೆ ಪರೀಕ್ಷೆ . ಅಲ್ಲಿಗೆ ಅವರ ಶಿಕ್ಷಣ ಮೊಟಕುಗೊಂಡಿದ್ದರೂ ಅವರ ಕಲಿಕೆಯ ಹಸಿವು ಹಾಗೂ ಜ್ಞಾನಾಕಾಂಕ್ಷೆ  ಹಿಂಗಿರಲಿಲ್ಲ, ಅವರ ಪ್ರಯತ್ನದ ಪ್ರತಿಫಲವೆಂಬಂತೆ  ಕನ್ನಡ, ಸಂಸ್ಕೃತ ಹಾಗೂ ಮರಾಠಿ ಭಾಷೆಗಳ ಮೇಲೆ  ಅಗಾಧ ಪಾಂಡಿತ್ಯ ಮತ್ತು ಪ್ರಭುತ್ವವನ್ನು ಹೊಂದಿದ್ದರು. ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳನ್ನು ಅವರು ಕರಗತ ಮಾಡಿಕೊಂಡಿದ್ದರು. ಬೆಟಗೇರಿ ಕೃಷ್ಣಶರ್ಮರು ವೃತ್ತಿಜೀವನ ಪ್ರಾರಂಭಿಸಿದ್ದು ಬೆಳಗಾವಿಯ ಮುನಸಿಪಾಲಿಟಿಯ ಆರೋಗ್ಯ ಇಲಾಖೆಯಲ್ಲಿ, ಇಲಿಯ ಬಲೆಗಳನ್ನು ಜನರಿಗೆ ಹಂಚಿ ನಂತರ ಇಲಿಯ ಸಹಿತವಾಗಿ ಬಲೆಗಳನ್ನು ಮರಳಿ ತಂದು ಕೊಡುವದೇ ಇವರ ಕೆಲಸ! ಕೆಲ ದಿನಗಳಲ್ಲೇ ಈ ಕೆಲಸವನ್ನು ತ್ಯಜಿಸಿ ಬೆಳಗಾವಿಯ ರಾಷ್ಟ್ರೀಯ ಶಾಲೆಯಲ್ಲಿ ಶಿಕ್ಷಕರಾಗಿ ಸೇರಿಕೊಂಡರು. ಅಲ್ಲಿ ಶ್ರೀ ಗಂಗಾಧರರಾವ್ ದೇಶಪಾಂಡೆ ಹಾಗೂ ಮುಂತಾದ  ಗಣ್ಯರ ಸಂಪರ್ಕದಿಂದ ಬೆಟಗೇರಿ ಕೃಷ್ಣಶರ್ಮರು ರಾಷ್ಟ್ರೀಯತೆಯ ಕಹಳೆಯನ್ನು ಮೊಳಗಿಸಿ, ರಾಷ್ಟ್ರೀಯತೆ ಕುರಿತಾಗಿ ಅನೇಕ ಕವನಗಳನ್ನು ಬರೆಯುತ್ತಾರೆ. 1918ರಲ್ಲಿ ಬೆಟಗೇರಿ ಕೃಷ್ಣಶರ್ಮರ ಪ್ರಥಮ ಕವನ ‘ಭಕ್ತಿ ಕುಸುಮಾವಳಿ’ ಸುಪ್ರಭಾತ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇವರು ಬರೆದ ಭಾವನಾತ್ಮಕವಾದ  ಹಾಡುಗಳು ಜನರ ಮನದ ನಾಡಿಯ ಮೀಟಿ ರಾಷ್ಟ್ರೀಯತೆ ಮತ್ತು ದೇಶಾಭಿಮಾನವನ್ನು ಜಾಗೃತಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದವು. ಇಂತಹ ಕೆಲ ಹಾಡುಗಳು ರಾಷ್ಟ್ರೀಯ ಪಂದ್ಯಾವಳಿ, ಗಾಂಧೀ ಗೀತ ಸಪ್ತಕ , ರಾಷ್ಟ್ರೀಯ ಪದ್ಯಮಾಲೆ ಎಂಬ ಹೆಸರಿನಿಂದ 1921ರಲ್ಲಿ ಬೆಳಗಾವಿಯಲ್ಲಿ ಮುದ್ರಣಗೊಂಡವು. ಈ ಹಾಡುಗಳು ತಾಳಕ್ಕೆ ತಕ್ಕಂತೆ ಹೆಜ್ಜೆ  ಹಾಕಿ ಪಥಸಂಚಲನ ಮಾಡುವದಕ್ಕೆ  ಹೇಳಿ ಮಾಡಿಸಿದಂತಿದ್ದವು.ಹೀಗಾಗಿ ಇವುಗಳನ್ನು ಹೆಜ್ಜೆಯ ಹಾಡುಗಳೆಂದೂ ಕರೆಯುತ್ತಿದ್ದರು.

ಇವರ ಮೇರು ಕೃತಿಯಾದ  ‘ಎನಿತು ಇನಿದು ಈ ಕನ್ನಡ ನುಡಿಯು, ಮನವನು ತಣಿಸುವ ಮೋಹನ ಸುಧೆಯು’ ಮರಾಠಿಮೋಹಿತವಾದ ಬೆಳಗಾವಿಯಲ್ಲಿ ಕನ್ನಡದ ಕಿಚ್ಚನ್ನು ಹಚ್ಚಿ ಕನ್ನಡಿಗರಲ್ಲಿ ಕನ್ನಡದ ಜಾಗೃತಿಯನ್ನು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಇದೆ ವೇಳೆ ‘ಮಾತೃಭೂಮಿ’ ಪತ್ರಿಕೆಯ ಸಂಪಾದಕರಾದರು. ನಂತರ  ಧಾರವಾಡಕ್ಕೆ ಬಂದು 1925ರಲ್ಲಿ ‘ಸ್ವಧರ್ಮ್’ ಪತ್ರಿಕೆಯ ಸಂಪಾದಕತ್ವವನ್ನು ವಹಿಸಿದರು ಮುಂದೆ ‘ಜಯಕರ್ನಾಟಕ’ಪತ್ರಿಕೆಯ ಸಂಪಾದಕರೂ ಆದರು.ಕನ್ನಡದ ಏಳಿಗೆಗಾಗಿ ಧಾರವಾಡದಲ್ಲಿ ’ಮನೋಹರ ಗ್ರಂಥಮಾಲೆ’ ಪ್ರಾರಂಭಕ್ಕೆ ಪ್ರೇರಣೆಯಾದರು. ನವರಾತ್ರಿಯನ್ನು ನಾಡಹಬ್ಬವಾಗಿ ಆಚರಿಸುವಂತೆ ಕರೆ ಕೊಟ್ಟು ಕನ್ನಡದ  ಜಾಗೃತಿಯ ಕಾರ್ಯಕ್ಕೆ ಅಡಿಪಾಯವಿಟ್ಟರು.

ಧಾರವಾಡದ ರಾಷ್ಟ್ರೀಯ ಶಾಲೆ ಮುಚ್ಚಿದ ನಂತರ ಬೆಂಗಳೂರಿನ ಆರ್ಯ ವಿದ್ಯಾ ಶಾಲೆಯಲ್ಲಿ ಶಿಕ್ಷಕರಾಗಿ ಸೇರಿಕೊಂಡರು. ಅಲ್ಲಿ ದೇವುಡು, ಮಾಸ್ತಿ ಮುಂತಾದವರ ಪರಿಚಯ ಮತ್ತು ಒಡನಾಟದಿಂದ  ಅವರ ಪ್ರತಿಭೆ ಅರಳಿ ಪಾಂಡಿತ್ಯ ವೃಧ್ಧಿಸಿತು. ಈ ವೇಳೆಗಾಗಲೇ ಸಾಹಿತ್ಯ ಲೋಕದಲ್ಲಿ ಸಾಹಿತಿಗಳ ಬಳಗದಲ್ಲಿ ಆನಂದ ಕಂದರ  ಕೃತಿಗಳು ವಿಶೇಷ ಆಸಕ್ತಿ ಹುಟ್ಟಿಸುವಲ್ಲಿ ಯಶಸ್ವಿಯಾಗಿದ್ದವು. ಈ ಅವಧಿಯಲ್ಲಿ ‘ಮುದ್ದನ ಮಾತು’ ಮತ್ತು ‘ಅರುಣೋದಯ’ ಎಂಬೆರಡು ಕವನ ಸಂಕಲನಗಳನ್ನು ಪ್ರಕಟಿಸಿ ಸಾಹಿತ್ಯ ಪ್ರಿಯರ ಪ್ರಶಂಸೆಗೆ ಪಾತ್ರರಾಗಿ ಶ್ರೇಷ್ಠ ಕವಿಗಳ ಸಾಲಿಗೆ ಸೇರಿದರು. ಇವರ ವಿಶಿಷ್ಟ ಧ್ವನಿ ಮತ್ತು ಕಾವ್ಯ ವಾಚನದ ಶೈಲಿ ಸಾಹಿತ್ಯಾಸಕ್ತರನ್ನು ಆಕರ್ಷಿಸಿತ್ತು. 1931 ರಲ್ಲಿ ‘ಬಡತನದ ಬಾಳು’ ಎಂಬ ಸಣ್ಣಕಥೆಗಳ ಸಂಕಲನ ಮತ್ತು 1933ರಲ್ಲಿ ಇವರ ಪ್ರಥಮ ಕಾದಂಬರಿ ‘ಸುದರ್ಶನ’ ಪ್ರಕಟವಾದವು. ಈ ಕೃತಿಗಳು ಬೆಟಗೇರಿ ಕೃಷ್ಣಶರ್ಮರನ್ನು ಅಗ್ರಗಣ್ಯ ಸಾಹಿತಿಗಳ ಪಂಕ್ತಿಗೆ ಏರಿಸಿದವು.

ಬೆಟಗೇರಿ ಕೃಷ್ಣಶರ್ಮರು ಬಡತನದ ಬೆಯ್ಗೆಯಲ್ಲಿ ಬೆಂದು ಬಾಡಿಗೆಯ ಮನೆಯಲ್ಲಿ ವಾಸ ಮಾಡಿದರೂ ಸಾಹಿತ್ಯದ ಕಾಯಕವನ್ನು ಮಾತ್ರ ದೈವ ಶ್ರದ್ಧೆಯಿಂದ ಮಾಡಿಕೊಂಡು ಬಂದರು.1938ರಲ್ಲಿ ‘ಜಯಂತಿ’ ಪತ್ರಿಕೆಯ ಸಂಪಾದಕರಾಗಿ 1961ರವರೆಗೂ ಅದನ್ನು ಮುನ್ನಡೆಸಿ ನವ ಲೇಖಕರನ್ನು ಪಳಗಿಸುವ ಮತ್ತು ನುರಿತ ಖ್ಯಾತ ನಾಮರಿಗೆ ಅಭಿವ್ಯಕ್ತಿಗೆ ವೇದಿಕೆ ಒದಗಿಸಿ ಕೊಟ್ಟರು. ‘ಜಯಂತಿ’ಯು ಸಾಹಿತ್ಯ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಗಳಲ್ಲಿ ಅತೀರಥ ಮಹಾರಥ ಸಾಹಿತಿ/ಲೇಖಕರಾದ ಎನ್ಕೆ, ಚೆನ್ನವೀರ ಕಣವಿ, ಮೊದಲಾದವರಿದ್ದಾರೆ. ‘ಜಯಂತಿ’ ಕೃಷ್ಣಶರ್ಮರ ಅವ್ಯಾಹತ ಪರಿಶ್ರಮ ಮತ್ತು ಧೃಡ ಸಂಕಲ್ಪಕ್ಕೆ   ಹಿಡಿದ ಕನ್ನಡಿಯಾಗಿತ್ತು.

ಜಾನಪದ ಕ್ಷೇತ್ರಕ್ಕೆ ಬೆಟಗೇರಿ ಕೃಷ್ಣಶರ್ಮರ ಕೊಡುಗೆ ಅಪಾರ. ಬಹುಶಃ ಬೇರೆ ಯಾವ  ವಿಸ್ಥಾಪಿತ,ಹೆಸರಾಂತ ಕವಿಯೂ ಸಲ್ಲಿಸಿದ  ಸೇವೆಯನ್ನು  ಇವರು ಜಾನಪದ ಕ್ಷೇತ್ರಕ್ಕೆ ಸಲ್ಲಿಸಿದ್ದಾರೆ. ‘ಬೀಸುವ ಕಲ್ಲಿನ ಹಾಡುಗಳು’, ನಾಗಮಂಗಲ’ ಹಾಗೂ ‘ಕನ್ನಡ ಜಾನಪದ ಸಾಹಿತ್ಯ’   ಬೆಟಗೇರಿ ಕೃಷ್ಣಶರ್ಮರ ಪ್ರಕಟಿತ ಜಾನಪದ ಕೃತಿಗಳು.ಇವರು ಬರವಣಿಗೆ ರೂಪದಲ್ಲದೇ ಮೌಖಿಕವಾಗಿ ಜಾನಪದ ಸಾಹಿತ್ಯಿಕ ಭಾಷಣ, ಚರ್ಚೆ, ವಿಚಾರ ವಿನಿಮಯ ಹಾಗೂ ಮಾರ್ಗದರ್ಶನಗಳ ರೂಪದಲ್ಲಿ ಕೈಗೊಂಡ ಕೈಂಕರ್ಯದ ವ್ಯಾಪ್ತಿ ಅಪರಿಮಿತ ಮತ್ತು ಅಗಾಧವಾದದ್ದು. ಜಾನಪದ ಕುರಿತ ಇವರ ಅಸಂಖ್ಯ ಬರಹಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬೆಟಗೇರಿ ಕೃಷ್ಣಶರ್ಮರ ಎಷ್ಟೋ ಕೃತಿಗಳು ಇವರ ನಾಮಾಂಕಿತವಿಲ್ಲದೆ   ಜಾನಪದ ಸಾಹಿತ್ಯವಾಗಿಯೇ ಉಳಿದು ಹೋಗಿವೆ.

ಕನ್ನಡ ಪ್ರಾಥಮಿಕ ಮತ್ತ್ತು ಮಾಧ್ಯಮಿಕ ಶಾಲೆಯ ತರಗತಿಗಳಿಗಾಗಿ ಬೆಟಗೇರಿ ಕೃಷ್ಣಶರ್ಮರು ಬರೆದ ಚಂದ್ರಹಾಸ, ಭೀಷ್ಮ ,ಲವ- ಕುಶ ಕೃತಿಗಳು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ.  ಮಕ್ಕಳಿಗಾಗಿ ಇವರು ರಚಿಸಿದ ‘ಬಸವಣ್ಣನವರು’ ಕೃತಿ ಸಕಲ ಸಾಹಿತ್ಯಾಸಕ್ತರಿಂದ ಪ್ರಶಂಸೆಗೊಳಗಾಗಿದೆ.

ಬೆಟಗೇರಿ ಕೃಷ್ಣಶರ್ಮರು 13 ಕವನ ಸಂಕಲನಗಳನ್ನು ರಚಿಸಿದ್ದಾರೆ. ಇವುಗಳಲ್ಲಿ 5(ರಾಷ್ಟ್ರೀಯ ಪದ್ಯಾವಳಿ,ಗಾಂಧಿ ಗೀತಪುಸ್ತಕ ಮುಂತಾದವುಗಳು) ರಾಷ್ಟ್ರೀಯತೆಯ  ಭಾವನೆಯನ್ನು ಜಾಗೃತಗೊಳಿಸಿ ದೇಶ ಸೇವೆ ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಪ್ರಚೋದನೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದವು. ಸ್ವಾತಂತ್ರ್ಯ ಯೋಧರಿಗೆ ಆನಂದ ಕಂದರ ಕವನಗಳು ಸಂವಾದ ಗೀತೆ ಹಾಗೂ  ಧ್ಯೇಯ ವಾಕ್ಯಗಳಾಗಿದ್ದವು.  ‘ಮುದ್ದನ ಮಾತು’, ‘ಅರುಣೋದಯ’, ‘ವಿರಹಿಣಿ’,’ಒಡನಾಡಿ’, ‘ನಾಲ್ವಾಡುಗಳು’, ‘ಉತ್ಸಾಹಗಾಥ’ ಅವು ಭಾವ ಗೀತೆಗಳ ಸಂಕಲನಗಳು.

1932ರಿಂದ ಸಣ್ಣಕಥೆಗಳ ಕೃಷಿ ಪ್ರಾರಂಭಿಸಿದ ಬೆಟಗೇರಿ ಕೃಷ್ಣಶರ್ಮರು ಬಡತನದ ಬಾಳು, ಸಂಸಾರ ಚಿತ್ರ , ನಮ್ಮ ಬದುಕು, ಜನಪದ ಜೀವನ, ಮಾತನಾಡುವ ಕಲ್ಲು, ಕಳ್ಳರ ಗುರು ಮತ್ತು ಇತರ ಕಥೆಗಳು ಎಂಬ ಆರು ಕಥಾ ಸಂಕಲನಗಳನ್ನು ಹೊರ ತಂದಿದ್ದಾರೆ. ಇವುಗಳಲ್ಲಿ ಹತ್ತು ಆಯ್ದ ಕಥೆಗಳನ್ನು ‘ದಶಮಂಜರಿ’ ಹೆಸರಿನಿಂದ ಪ್ರಕಟಿಸಿದ್ದಾರೆ. ಬೆಟಗೇರಿ ಕೃಷ್ಣಶರ್ಮರು ತಾವು ಕಂಡು೦ಡ ಅನುಭವಿಸಿದ ಜೀವನ  ಪ್ರಸಂಗಗಳನ್ನು, ಸಮಾಜದ  ಕುರಿತಾದ ತಮ್ಮ ದೃಷ್ಟಿಕೋನ ಮತ್ತು ಧೋರಣೆಗಳನ್ನು ಅಕ್ಷರರೂಪದಲ್ಲಿ ಸಾಕ್ಷೀಕರಿಸಿ ಕಥೆಗಳನ್ನು ರಚಿಸಿರುವದು ವೈಶಿಷ್ಟ್ಯ.

ಬೆಟಗೇರಿ ಕೃಷ್ಣಶರ್ಮರ 5 ಕಾದಂಬರಿಗಳು ಮಾತ್ರ ಪ್ರಕಟವಾಗಿವೆ. ಅವುಗಳಲ್ಲಿ ‘ಸುದರ್ಶನ’ ಮತ್ತು ‘ಮಗಳ ಮದುವೆ’ ಸಾಮಾಜಿಕ ಕಾದಂಬರಿಗಳಾಗಿದ್ದು , ‘ರಾಜಯೋಗಿ’,’ಅಶಾಂತಿಪರ್ವ’ ಮತ್ತು ‘ಮಲ್ಲಿಕಾರ್ಜುನ’ ವಿಜಯನಗರ ಸಾಮ್ರಾಜ್ಯದ ಕಥಾ ವಸ್ತುವನ್ನು ಹೊಂದಿದ್ದ  ಐತಿಹಾಸಿಕ ಕಾದಂಬರಿಗಳಾಗಿದ್ದವು. ಸಂಶೋಧನೆ, ಮೀಮಾಂಸೆ ಮತ್ತು ವಿಮರ್ಶೆಗೆ ಸಂಬ೦ಧಿಸಿದ ಬೆಟಗೇರಿ ಕೃಷ್ಣಶರ್ಮರ ‘ಕರ್ನಾಟಕ ಜೀವನ’,’ಸಾಹಿತ್ಯವು ಸಾಗಿರುವ ದಾರಿ’ , ‘ನಮ್ಮ ಸಂಸ್ಕೃತಿ ಪರಂಪರೆ’, ‘ಸಾಹಿತ್ಯ ವಿಹಾರ’ ಮೇರು ಕೃತಿಗಳಾಗಿವೆ.

ಆನಂದ ಕಂದರ ಬಹುಮುಖ ಪ್ರತಿಭಾ ಕಾರಂಜಿಗೆ ಎಲ್ಲೆಯೇ ಇರಲಿಲ್ಲ ಎಂಬುದಕ್ಕೆ ನಿದರ್ಶನವೆಂದರೆ 1950ರಲ್ಲಿ ಬಾನುಲಿ ರೂಪಕಗಳನ್ನು ರಚಿಸಲು ಪ್ರಾರಂಭಿಸಿದ್ದು. ಒಟ್ಟು ಆಕಾಶವಾಣಿಯ ಬಾನುಲಿ ಕಾರ್ಯಕ್ರಮದಲ್ಲಿ ಬೆಟಗೇರಿ ಕೃಷ್ಣಶರ್ಮರ 37ರೂಪಕಗಳು ಪ್ರಸಾರಗೊಂಡಿವೆ.ಇವುಗಳಲ್ಲಿ ಬೆಳವಡಿ ಮಲ್ಲಮ್ಮ, ಬೆಂದ ಹೃದಯ, ಮುಂಡರಗಿ ಗಂಡುಗಲಿ, ಪಂಚಗಂಗಾ ಪ್ರಮುಖವಾದವುಗಳು.

ದಾಸ ಸಾಹಿತ್ಯ  ಮತ್ತು ಬೇರೆ ಕೆಲವು ಗ್ರಂಥಗಳನ್ನು ಬಹಳ ಶಾಸ್ತ್ರೀಯವಾಗಿ ಸಂಪಾದಿಸಿದ ಕೀರ್ತಿ ಬೆಟಗೇರಿ ಕೃಷ್ಣಶರ್ಮರಿಗೆ  ಸಲ್ಲುತ್ತದೆ. ಇವುಗಳಲ್ಲಿ ಪುರಂದರದಾಸರ ಸಮಗ್ರ ಸಾಹಿತ್ಯ ,ಕನಕದಾಸರ ಭಕ್ತಿಗೀತೆಗಳು ಪ್ರಮುಖ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸಿದ ಅತೀ ಕಡಿಮೆ ಅವಧಿಯಲ್ಲಿ ‘ಅಕ್ರೂರ ಚರಿತ್ರೆ’, ‘ಮೋಹನ ತರಂಗಿಣಿ’, ‘ಕುಮಾರವ್ಯಾಸ ಭಾರತ ‘ ಕೃತಿಗಳು ಪ್ರಕಟವಾಗುವಲ್ಲಿ ಪ್ರಮುಖ  ಪಾತ್ರ ವಹಿಸಿದರು. ತರುವಾಯ ‘ಪ್ರಸನ್ನ ವೆಂಕಟದಾಸರ ಭಾಗವತ’, ‘ಹರಿದಾಸ ಭಕ್ತಿ ಸಾಧನೆ’ ಎಂಬ ಎರಡು ಗ್ರಂಥಗಳನ್ನು ಪ್ರಕಟಿಸಿದರು.

ಬೆಟಗೇರಿ ಕೃಷ್ಣಶರ್ಮರು ಆರು ದಶಕಗಳಿಗೂ ಮಿಕ್ಕಿ  ಅವ್ಯಾಹತವಾಗಿ ಕನ್ನಡ ಸಾರಸತ್ವಲೋಕಕ್ಕೆ ನೀಡಿದ ಬಹುಮುಖ ಕೊಡುಗೆಗಳಿಗೆ ಅನೇಕ ಪ್ರಶಸ್ತಿ ಮತ್ತು ಗೌರವಗಳು ಸಂದಿವೆ. ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್,ಕರ್ನಾಟಕ ಸಾಹಿತ್ಯ ಅಕ್ಯಾಡಮಿ ಪ್ರಶಸ್ತಿ ,ಜಾನಪದ ಸಮ್ಮೇಳನ ಅಧ್ಯಕ್ಷತೆ ,ವೈದ್ಯಕೀಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದವುಗಳು  ಇವರನ್ನು ಅರಸಿಬಂದ  ಗೌರವಗಳು. ಯಾವುದೇ ಪ್ರಶಸ್ತಿಯ ಬೆನ್ನಟ್ಟದ ಬೆಟಗೇರಿ ಕೃಷ್ಣಶರ್ಮರು, ದೊರಕಿದ ಪ್ರಶಸ್ತಿಯ ಮೌಲ್ಯವನ್ನು, ಗೌರವವನ್ನು ಹೆಚ್ಚಿಸಿ ಪ್ರಶಸ್ತಿಗೆ ಮೆರಗು ತಂದುಕೊಟ್ಟರು

ಅವರು ಮಾಡಿದ ಸಾಹಿತ್ಯ ಕೃಷಿಗೆ ಜ್ಞಾನಪೀಠ ಪ್ರಶಸ್ತಿ ಎಂದೋ ದೊರಕಬೇಕಿತ್ತು, ಆದರೆ ಹಾಗಾಗಲಿಲ್ಲ…ಇತ್ತೀಚಿನ ದಿನಗಳಲ್ಲಿ  ಜಾತಿ,ರಾಜಕೀಯ ಲಾಬಿ ಇಲ್ಲದಿದ್ದರೆ  ಪ್ರಶಸ್ತಿ ದುರ್ಲಭವಾಗಿಬಿಟ್ಟಿದೆ. ಬಹುಶಃ ಮೋದಿಜಿಯವರು ಪದ್ಮ ಪ್ರಶಸ್ತಿಗಳ ಕುರಿತು ಸಾಮಾನ್ಯ ಜನತೆಯ ಅಭಿಪ್ರಾಯ ಕೇಳುವ ಪ್ರಕ್ರಿಯೆ ಪ್ರಾರಂಭಿಸಿದ೦ತೆ,  ಸಾಹಿತ್ಯಕ್ಕೆ ಸಂಬಂಧಿಸಿದ ಪ್ರಶಸ್ತಿಗಳ ಕುರಿತೂ ಓದುಗರ ಅಭಿಪ್ರಾಯ ಕೇಳಿದಲ್ಲಿ ಬೆಟಗೇರಿ ಕೃಷ್ಣಶರ್ಮರಿಗೆ ಹಾಗೂ ಎಸ್.ಎಲ್.ಭೈರಪ್ಪರಂಥವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆಯಬಹುದೇನೋ!! .

ವಿಪರ್ಯಾಸವೆಂದರೆ ಇಂಥ ಮಹನೀಯರ  ಕೃತಿಗಳು ಸಾಮಾನ್ಯರಿಗೆ ಎಟಕದೆ ದುರ್ಲಭವಾಗಿವೆ.ಬಹುತೇಕ ಪುಸ್ತಕ ಭಂಡಾರಗಳಲ್ಲಿ ಆನಂದ-ಕಂದರ ಪುಸ್ತಕಗಳು ಅಲಭ್ಯ, ಆನ್ ಲೈನ್ ನಲ್ಲೂ ತಡಕಾಡಿದರೂ ಕಾಣ ಸಿಗುವದಿಲ್ಲ. ಕನ್ನಡ ಸಂಸ್ಕೃತಿ ಇಲಾಖೆಯ ಜಾಲತಾಣದಲ್ಲಿ ಅನೇಕ ಅಪರಿಚಿತ ತಥಾಕಥಿತ ಸಾಹಿತಿಗಳ ಕುರಿತು ಮಾಹಿತಿ ಲಭ್ಯವಿದೆ ಆದರೆ ಬೆಟಗೇರಿ ಕೃಷ್ಣಶರ್ಮರ ಕುರಿತು ಪ್ರಸ್ತಾಪವೇ ಇಲ್ಲ.   ತಾರತಮ್ಯ ಧೋರಣೆ ತಾಳದೆ, ನಿರುತ್ಸಾಹ ತೋರದೆ ಸರಕಾರವೇ ಮುಂದಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಮುಖಾಂತರ  ಇಂಥ ಮಹನೀಯರ ಕಾವ್ಯಗಳನ್ನು ಪ್ರಕಟಿಸಿ ಜನರಿಗೆ ತಲುಪಿಸಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ರಕ್ಷಣೆಗೆ ಕಟಿಬದ್ಧವಾಗಬೇಕು.

ಆನಂದ ಕಂದರ ಕುರಿತಾದ ಮಾಹಿತಿ –  ವಿವಿಧ ಮೂಲಗಳಿಂದ ಸಂಗ್ರಹಿಸಿದ್ದು

Thursday, September 23, 2021

ಅನಂತನಾಗ ಅವರಿಗೆ ಪದ್ಮಶ್ರೀ ಪುರಸ್ಕಾರ !! ??

ಒಂದು ವೇಳೆ ಪದ್ಮಶ್ರೀ ಏನಾದರೂ ಅನಂತನಾಗ್ ಅವರ ಮುಡಿಗೇರಿದರೆ ಅದು ನಿಜವಾಗಿಯೂ "ಪದ್ಮಶ್ರೀ ಪುರಸ್ಕಾರಕ್ಕೇ"  ಗೌರವ ಸಿಕ್ಕ ಹಾಗೆ !!  



ಅನಂತನಾಗ್ ಅನಂತಸಾಧ್ಯತೆಗಳ ಮೇರು ಕಲಾವಿದ. 1973ರ ವರ್ಷದ ‘ಸಂಕಲ್ಪ’ ಚಿತ್ರದಿಂದ  ಮೊದಲ್ಗೊಂಡು ಇಂದಿನವರೆಗೆ ತೋರುತ್ತಾ ಬಂದಿರುವ ಪ್ರತಿಭೆ ಅಸಾಮಾನ್ಯವಾದದ್ದು.

ಅನಂತನಾಗ್ ಅವರು 1948ರ ಸೆಪ್ಟೆಂಬರ್ 4ರಂದು ಜನಿಸಿದರು.  ಅಮ್ಮ ಆನಂದಿ, ತಂದೆ ಸದಾನಂದ ನಾಗರಕಟ್ಟೆ.  ಅವರ ಪ್ರಾರಂಭಿಕ ಓದು ದಕ್ಷಿಣ ಕನ್ನಡದ  ಆನಂದ ಆಶ್ರಮದಲ್ಲಿ ನಡೆಯಿತು.  ಆ ನಂತರದಲ್ಲಿ ಉತ್ತರ ಕನ್ನಡದ ಚಿತ್ರಾಪುರ ಮಠದಲ್ಲಿ ನೆರವೇರಿತು.  ಹೆಚ್ಚಿನ ಓದಿಗೆ ಮುಂಬೈನಲ್ಲಿ ನೆಲೆಸಿದ್ದ ಅನಂತ್,  ಮರಾಠಿ ರಂಗಭೂಮಿಯನ್ನು ಎಂಟು ವರ್ಷಗಳ ಕಾಲ ಬೆಳಗಿದರು.

ಚಿತ್ರರಂಗದಲ್ಲಿ ಅವರಿವರನ್ನು ‘ಓ, ಅವರು ಪಂಚ ಭಾಷಾ ತಾರೆ ಎಂದು ಕೆಲವರನ್ನು ಕರೆಯುವುದುಂಟು’.  ಅನಂತನಾಗ್ ಅವರ ಮುಂದೆ ಅದೆಲ್ಲಾ ಏನೂ ಲೆಕ್ಕಕ್ಕಿಲ್ಲ.  ಅವರು ಸಪ್ತಭಾಷಾ ತಾರೆ.  ಕನ್ನಡ, ಹಿಂದಿ, ಮರಾಠಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅವರು ನೆನಪಿನಲ್ಲಿ ಉಳಿಯುವಂತಹ ಪಾತ್ರಗಳಲ್ಲಿ ನಟಿಸಿ ಎಲ್ಲೆಲ್ಲೂ ವಿಜ್ರಂಭಿಸಿದ್ದಾರೆ.  ತುಂಬಿದ ಕೊಡ ತುಳುಕುವುದಿಲ್ಲ.  ಅನಂತನಾಗ್ ಎಲ್ಲವನ್ನೂ ಸದ್ದುಗದ್ದಲವಿಲ್ಲದೆ ಮಾಡುತ್ತಾ ನಡೆಯುತ್ತಾರೆ.

Wednesday, April 7, 2021

ಕನ್ನಡದ ಖ್ಯಾತ ನಟಿ, ಎಸ್‌ವಿ ರಾಜೇಂದ್ರಸಿಂಗ್‌ ಬಾಬು ತಾಯಿ ಪ್ರತಿಮಾದೇವಿ ವಿಧಿವಶ

ಕನ್ನಡದ ಖ್ಯಾತ ಹಿರಿಯ ನಟಿ ಹಾಗೂ ನಿರ್ದೇಶಕ ಎಸ್‌ವಿ ರಾಜೇಂದ್ರ ಸಿಂಗ್‌ ಬಾಬು ಅವರ ತಾಯಿ ಪ್ರತಿಮಾ ದೇವಿ ವಿಧಿವಶರಾಗಿದ್ದಾರೆ...ಕನ್ನಡ ಸೇರಿ ಸುಮಾರು 80 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು ಪ್ರತಿಮಾದೇವಿ... !!



Sunday, July 29, 2018

ಕನ್ನಡಕ್ಕೊಬ್ಬನೇ ಕೈಲಾಸಂ

‘ನಾಯಿಗ್ಹಾಕಿದ್ನಿನ್ಜನ್ಮದುಚ್ಚಿಷ್ಠಾನ್ನರೀಗ್ಹಾಕ”

‘ಸಾಬೋನ್ಹಾಕ್ತಿಕ್ಕೊಂಡ್ರೇನೆ ಸುಣ್ಣ ಬಳ್ದ್ಹಾಗೆ ಬೆಳ್ಗಾಗಾಗತ್ಮ್ಪೆ ಅಂತ ತಿಳ್ಕೊಂಡಿದೀರಾ?’

‘ನಾಟ್ಕದ್ವಿಚಾರನ್ನೇ ಮರತ್ಬಿಟ್ಟು ಧ್ವಜ ಸ್ತಂಬ್ಹ್ದಾಗೆ ನೆಟ್ಕೊಂಡಕ್ಷತ್ರಗಳ ಕೀಳ್ತಿದ್ದೀಯಾ?’

ಹೌದು ಈ ರೀತಿಯಿಂದ ವಾಕ್ಯ ರಚನೆ ಮಾಡ್ತಿದ್ದದು, ಮಾಡೊಕ್ಕಾಗಿದ್ದು ಕೈಲಾಸಂರಿಂದಲೇ...

“ಕನ್ನಡ ಕವಿ ತಿಲಕಂ ಗುಂಡಂ”

“ಕವಿ ಮಂಡಲಾಗ್ರೇಸರ ಚಂಡ, ಪ್ರಚಂಡ ಗುಂಡೂ”

‘ಕನ್ನಡ ಪ್ರಹಸನ ಪ್ರಪಿತಾಮಹ ಕೈಲಾಸಂ”

ಎಂದು ಸ್ವಯಂ ಘೋಷಿಸಿಕೊಂಡ ಕೈಲಾಸಂ ನಾಟಕಗಳ ಡೈಲಾಗೂ ತುಂಬಾ ಸ್ವೀಡೂ, ಪ್ರಾಸಬದ್ದವೂ ಆಗಿದ್ದವು.  ಭಾಷೆ ಬಹಳ ಕಠಿಣವಾಗಿರುತ್ತಿದ್ದವು.  ಕೈಲಾಸಂರ ನಿಜ ಬದುಕಿನ ಸಂಭಾಷಣೆಯೂ ಹೀಗೆಯೇ ಇರುತ್ತಿದ್ದವು.  ಇದಕ್ಕೆ ನಿದರ್ಶನವಾಗಿ ಬಿ.ಎಸ್.ಕೇಶವ್‌ರಾವ್‌ರವರು ಬರೆದಿರುವ ‘ಕನ್ನಡಕೊಬ್ಬನೇ ಕೈಲಾಸಂ’ನ ಒಂದು ಸನ್ನಿವೇಶ ಹೀಗಿದೆ.

1937-38ರ ಸಮಯ.  ಮೈಸೂರು ಮಹಾರಾಜ ಕಾಲೇಜಿನಲ್ಲಿ ಕೈಲಾಸಂರ ಭಾಷಣವನ್ನು ಏರ್ಪಡಿಸಲಾಗಿತ್ತು.  ಸಭೆಯಲ್ಲಿ ಕೈಲಾಸಂ, ವಿದ್ಯಾರ್ಥಿಗಳನ್ನುದ್ದೇಶಿಸಿ ಭಾಷಣದ ಬದಲು, ರಾಮಾಯಣ ಮಹಾಭಾರತಕ್ಕೆ ಸಂಬಂಧಪಟ್ಟಂತೆ ಪ್ರಶ್ನೆಗಳನ್ನು ಕೇಳಲು ಹೇಳಿದರು.  

Monday, April 23, 2018

ಬೀchi (ರಾಯಸಂ ಭೀಮಸೇನ ರಾವ್)


ಬೀchi  ಯವರ 105ನೇ ಹುಟ್ಟುಹಬ್ಬದ ಸವಿ ನೆನಪಿನಲ್ಲಿ !!
ಬೀchi (ರಾಯಸಂ ಭೀಮಸೇನ ರಾವ್
(Born: ಏಪ್ರಿಲ್ 23, 1913 - Died: ಡಿಸೆಂಬರ್ 7, 1980) 
ಬೀchi ಅಂದರೆ ವೈಶಿಷ್ಟ್ಯಪೂರ್ಣ ಹಾಸ್ಯ ಬರಹಗಳಿಗೆ ಮತ್ತೊಂದು ಹೆಸರು.

ನಿನ್ನಂತೆ ನೀನಾಗು ನಿನ್ನ ನೀ ಅರಿ ಮೊದಲು
ಚೆನ್ನೆಂದು ದೊಡ್ಡವರ ಅನುಕರಿಸ ಬೇಡ
ಏನಾಯ್ತು ಮರಿಕತ್ತೆ? ಚೆಲುವಿತ್ತು, ಮುದ್ದಿತ್ತು
ತನ್ನಪ್ಪನಂತಾಗಿ ಹಾಳಾಯ್ತೊ ತಿಂಮ".
                    (- ಅಂದನಾ ತಿಂಮ)

ಬರಹಗಾರನ ವೈಯಕ್ತಿಕ ಪ್ರತಿಭೆ ಜಡ ಅನುಕರಣೆಯ ಮರಳಿನಲ್ಲಿ ಇಂಗಿ ಹೋಗಬಾರದು. ಇದು ಬೀchi ದೃಷ್ಟಿಕೋನ. ಈ ದೃಷ್ಟಿಯನ್ನು ಕಂಡೇ ಇರಬೇಕು ತುಂಬ ಗಂಭೀರ ಬರಹಗಾರರಾದ ಶಂ.ಬಾ. ಜೋಶಿ ಯವರು ಬೀchiಯವರನ್ನು “ತನ್ನನ್ನು ತಾನೇ ರೂಪಿಸಿಕೊಂಡ ಅಪೂರ್ವ ಸ್ವಯಂಭೂ” ಎಂದು ವರ್ಣಿಸಿದ್ದಾರೆ. ಬೀchi ಕನ್ನಡ ಸಾಹಿತ್ಯಕ್ಕೊಂದು ಸೊಗಸು ಮೂಡಿಸಿದವರು.

Saturday, July 29, 2017

ಕನ್ನಡಕ್ಕೊಬ್ಬನೇ ಕೈಲಾಸಂ

ಟಿ ಪಿ ಕೈಲಾಸಂ (1884 - 1946) ರ 133ನೇ ಹುಟ್ಟುಹಬ್ಬದ ಸವಿ ನೆನಪಿನಲ್ಲಿ

""ನಕ್ಕು ನಗಿಸುವಾತ ಸಾವಿರ್ಜನಕ್ತ್ರಾತ"" 
."ಕರ್ನಾಟಕ ಪ್ರಹಸನ ಪಿತಾಮಹ". ತ್ಯಾಗರಾಜ ಪರಮಶಿವ ಕೈಲಾಸಂ ಕನ್ನಡದ ಜನರ ಮನ ಮನೆಗಳಲ್ಲಿ ಚಿರಕಾಲ ಉಳಿಯುವ, ಜನಪ್ರಿಯ ಹೆಸರು. ಇವರು ಕನ್ನಡ ರಂಗಭೂಮಿಗೆ ನೀಡಿದ ಕೊಡುಗೆ ಅಪಾರ. ಆಧುನಿಕ ರಂಗಭೂಮಿಯ ಹರಿಕಾರರೆಂದೇ ಕರೆಯಲ್ಪಟ್ಟ ಇ‌ವರ ಹಾಸ್ಯ ಚಟಾಕಿಗಳು ಇಂದಿಗೂ ಜನರನ್ನು ನಗಿಸುತ್ತಾ ನಲಿಸುತ್ತಾ ಇವೆ. ಕನ್ನಡ ರಂಗಭೂಮಿಯನ್ನು ಸಾಂಪ್ರದಾಯಿಕತೆಯ ಸಂಕೋಲೆಗಳಿಂದ ಹೊರಗೆಳೆದು ತಂದು ಅದಕ್ಕೆ ಹೊಸ ತಿರುವನ್ನು ಆಯಾಮಗಳನ್ನು ತಂದು ಕೊಟ್ಟ ಹಿರಿಮೆ ಅವರದು.

ಬಾಲ್ಯ
ಕೈಲಾಸಂರವರು ತಮಿಳು ಮೂಲದ ಉನ್ನತ ಮಟ್ಟದ ಮನೆತನದಿಂದ ಬಂದವರು. ಅವರ ತಂದೆ ಆಗಿನ ಕಾಲಕ್ಕೆ ಬಹು ದೊಡ್ಡ ಹೆಸರು ಮಾಡಿದ್ದ ಜಸ್ಟಿಸ್ ಪರಮಶಿವ ಅಯ್ಯರ್, ತಾಯಿ ಕಮಲಮ್ಮ. ಬೆಂಗಳೂರಿನಲ್ಲಿ ಹುಟ್ಟಿದ ಕೈಲಾಸಂ ಅವರ ಬಾಲ್ಯ ಜೀವನ ಅತ್ಯಂತ ಶಿಸ್ತಿನಿಂದ ಕಳೆಯಿತು. ವಿದ್ಯಾಭ್ಯಾಸ ನಡೆದುದು ಬೆಂಗಳೂರು, ಮೈಸೂರು, ಹಾಸನಗಳಲ್ಲಿ. ಮೆಟ್ರಿಕ್ಯುಲೇಷನ್ ಪಾಸು ಮಾಡಿದ್ದು ಮದರಾಸಿನ ಹಿಂದು ಹೈಸ್ಕೂಲಿನಲ್ಲಿ.

Saturday, July 1, 2017

ಭಾರತೀಯ ಚಾರ್ಟರ್ಡ್ ಅಕೌಂಟೆಂಟರುಗಳ ದಿನ

ಜುಲೈ 1ರ ದಿನ ‘ಚಾರ್ಟರ್ಡ್ ಅಕೌಂಟೆಂಟ್’ಗಳ ದಿನವೆಂದು ಪರಿಗಣಿತವಾಗಿದೆ. ಜುಲೈ 1, 1949ರಂದು ಸಂವಿಧಾನದಡಿಲ್ಲಿನ ಚಾರ್ಟರ್ಡ್ ಅಕೌಂಟೆಂಟ್ ಕಾಯಿದೆಯ ಪ್ರಕಾರ ‘ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ’ ಸಂಸ್ಥೆ ಅಸ್ತಿತ್ವಕ್ಕೆ ಬಂತು. ಈ ಸಂಸ್ಥೆಯು ‘ಐಸಿಎಐ(ICAI)’ ಎಂಬ ಕಿರುರೂಪದಿಂದ ಪ್ರಖ್ಯಾತವಾಗಿದೆ. 

ಚಾರ್ಟರ್ಡ್ ಅಕೌಂಟೆಂಟ್ಗಳು ವೃತ್ತಿಪರ ಸಾಂಸ್ಥಿಕ ಲೆಖ್ಖಪತ್ರ ನಿರ್ವಹಣೆ ಮತ್ತು ಲೆಖ್ಖ ಪರಿಶೋಧಕರಾಗಿ ಈ ಸಂಸ್ಥೆಯ ಮೂಲಕ ಪರಿಣತಿಯನ್ನು ಸಾಧಿಸಿರುತ್ತಾರೆ. ಈ ರೀತಿ ಪರಿಣತಿ ಸಾಧಿಸಿರುವ ಅತೀ ಹೆಚ್ಚು ಸದಸ್ಯತ್ವ ಸಂಖ್ಯೆ ಹೊಂದಿರುವ ದೃಷ್ಟಿಯಿಂದ ಈ ಐಸಿಎಐ ಸಂಸ್ಥೆಯು ‘ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ಸರ್ಟಿಫೈಡ್ ಪಬ್ಲಿಕ್ ಅಕೌಂಟೆಂಟ್ಸ್‘ ನಂತರದಲ್ಲಿ ವಿಶ್ವದ ತನ್ನ ಇತರ ಸಮಾನೋದ್ದೇಶಿತ ಸಂಸ್ಥೆಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.